ಗುರುವಾರ, ಸೆಪ್ಟೆಂಬರ್ 1, 2016

ಮುಸ್ಲಿಂ ಮನಸ್ಥಿತಿಗಳು ದೇಶಕ್ಕೆ ಮಾರಕವಾಗುತ್ತಿದೆ.


ಎಪ್ಪತ್ತನೆಯ ಸ್ವಾತಂತ್ರ್ಯ ಹಾಗೆ ಬಂದು ಹೀಗೆ ಹೋದದ್ದು ಗೊತ್ತೇ ಆಗಲಿಲ್ಲ. ಆದರೆ ಈ ಸ್ವಾತಂತ್ರ್ಯದ ವೇಳೆ ನಾವಿನ್ನೂ ಪರಕೀಯರ ದಬ್ಬಾಳಿಕೆಯನ್ನು ಸಹಿಸುತ್ತಲೇ ಇದ್ದೇವೆ ಎಂಬ ರೀತಿಯಲ್ಲಿ ಕೆಲವು ಮುಸ್ಲಿಂ ಯುವಕರು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟರು. ತಮ್ಮಳೊಗೆ ಹುದುಗಿದ್ದ ವಿಷಾದ- ವಿಪರ್ಯಾಸಗಳನ್ನು ಪ್ರಕಟಿಸುವ ರೀತಿ ಕೂಡಾ ಆಗಿತ್ತದು. ಸ್ವತಂತ್ರ ಭಾರತದ ಮಹನೀಯ ಸಂದೇಶಗಳೊಂದಿಗೆ ಬಾನಂಗಳದಲ್ಲಿ ತ್ರಿವರ್ಣ ಕೇತನ ಹಾರಾಡುವಾಗ ಭಾರತೀಯ ಮುಸ್ಲಿಂ, ದಲಿತರ ಹೃದಯಗಳು ಇನ್ನೂ ವಿಷಾದತೆಯಿಂದ ಹೊರ ಬಂದಿಲ್ಲವೆಂಬುದು ಸ್ಪಟಿಕದಷ್ಟೇ ಸತ್ಯ.

ಭಾರತ ಈಗಲೂ ಸ್ವತಂತ್ರಗೊಂಡಿಲ್ಲವೆಂಬುದನ್ನು ಬಲವಾಗಿ ನಂಬುವವನು ನಾನು. ಒಂದೆಡೆ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಾಳ ಕೈಗಳ ಮಿಲಾವಣೆ ನಡೆದರೆ   ಮತ್ತೊಂದೆಡೆ ವಾಸ್ತವದ ಮೇಲೆ ಕತ್ತರಿ ಪ್ರಯೋಗ ನಡೆಯುತ್ತಿದ್ದು ಇತಿಹಾಸದಿಂದಲೇ ಮುಸ್ಲಿಮರನ್ನು, ದಲಿತರನ್ನು ಕಿತ್ತೆಸೆಯುವ ಪರಿಶ್ರಮಗಳು ನಡೆಯುತ್ತಿದೆ. ನಿರ್ಧಿಷ್ಟ ಕೋಮುವಿನ ಮೇಲೆ ಕಾನೂನಿನ ಕರಾಳ ದಬ್ಬಾಳಿಕೆಯೂ ನಡೆಯುತ್ತಿದೆ. ಲಂಚ, ಭ್ರಷ್ಟಾಚಾರಗಳು ಭಾರತ ಪ್ರತಿಯೊಬ್ಬ ಬಡವನನ್ನೂ ಕಿತ್ತು ತಿನ್ನುತ್ತಿದೆ.

ಇನ್ನು ಮುಸ್ಲಿಮರ ವಿಷಯಕ್ಕೆ ಬಂದರೆ ಸ್ವಾತಂತ್ರ್ಯ ಬಿಡಿ ಮಾನವೀಯ ಹಕ್ಕಿನ ಪರ ಧ್ವನಿಯೆತ್ತುವುದನ್ನು ಕೂಡಾ ಉಗ್ರತೆಯ ವ್ಯೂಹದೊಳಗೆ ಕಾಣಲಾಗುತ್ತಿದೆ. ಅದಕ್ಕೊಂದು ತಾಜಾ ಉದಾಹರಣೆ ಅಂದರೆ ಖ್ಯಾತ ವಿದ್ವಾಂಸ ನಾಸರ್ ಮ ಅದನಿ. ಅವರು ಕೇವಲ ಮುಸ್ಲಿಮರಿಗಾಗಿ ಮಾತ್ರ ಧ್ವನಿಯೆತ್ತಿದವರಲ್ಲ. ಈ ದೇಶದಲ್ಲಿ ಮರ್ಧನಕ್ಕೆ, ಪೀಡನೆಗೆ ವಿಧೇಯರಾಗಿ ನರಕ ಸದೃಶಃ ಬದುಕನ್ನು ಕಾಣುತ್ತಿರುವ ಅದೆಷ್ಟೋ ಹಿಂದು ಧರ್ಮಿಯರ ಪರ ಶಬ್ದ ಎತ್ತಿದ್ದರು. ಆದರೆ ವಿನಾಕಾರಣ ಅವರನ್ನು ಬಂಧಿಸಿ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅನ್ಯಾಯದ ಮುದ್ರೆಯನ್ನು ಒತ್ತಿ ವಿಚಾರಣಾಧೀನ ಕೈದಿಯನ್ನಾಗಿ ಕಾರಾಗೃಹಕ್ಕೆ ತಳ್ಳಲ್ಪಟ್ಟಿದೆ. ಇಲ್ಲಿ ಗಮನಾರ್ಹ ವಿಚಾರವೇನೆಂದರೆ ಇನ್ನೂ ಬ್ರಿಟಿಷರ ಸಂಹಾರಾತ್ಮಕ ಮನಸ್ಥಿತಿಯ ಜೀವಂತಿಕೆ. ಪರಕೀಯರ ಮುಂದೆ ಭಾರತೀಯರು ಯಾವ ರೀತಿಯಲ್ಲಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ  ಹೋರಾಡಿದ್ದರೋ ಅದೇ ರೀತಿಯ ಹೋರಾಟ ಇಂದೂ ಕೂಡಾ ಮುಂದುವರಿಯುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟಿಷರಿಂದ ನಡೆಯುತ್ತಿದ್ದ ಹಲ್ಲೆ, ಬಂಧನ, ಇಂದಿಗೂ ಮುಂದುವರಿದಿದೆ. ಮುಸ್ಲಿಂ ಮತ್ತು ದಲಿತ ಸಂವೇದನೆಯ ಮೇಲೆ ನಿರಂತರ ದಾಳಿಗಳಾಗುತ್ತಿದೆ.‌ ತಮ್ಮ ಮೇಲೆ ನಡೆಯುವ ಶೋಷಣೆಯ ವಿರುದ್ದ ಪ್ರ ದ ಕಾನೂನು ಉಲ್ಲಂಘಿಗಳಾಗಿ ಕಾಣಲಾಗುತ್ತಿದೆ.

ಆದರೆ ಇಲ್ಲಿ ಶೋಷಣೆಯ ವಿರುದ್ದ ನಡೆಯುತ್ತಿರುವ ಪ್ರತಿಭಟನೆಗಳು ಅರ್ಥ ಕಳೆದು ಕೊಳ್ಳುತ್ತಿದೆ. ದಲಿತರು ಮತ್ತು ಹಿಂದುಳಿದವರು ಕಾನೂನಿನ ವೃತ್ತಾಂತದಲ್ಲೇ ಹೋರಾಟ ನಡೆಸುತ್ತಿದ್ದಾರೆ. ಅದು ಆಳುವ ವರ್ಗದ ಕಿವಿಗೆ ತಟ್ಟುತ್ತಿದೆ. ಆದರೆ ಕೆಲವು ರೆಡಿಮೆಡ್ ಮುಸ್ಲಿಂ ಸಮುದಾಯ ಸುಧಾರಕರೆನಿಸಿಕೊಂಡವರು ಧರ್ಮ ಸೀಮೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ, ಹೋರಾಟಕ್ಕೆ ಇಳಿಯುತ್ತಿದೆ. ಆದ್ದರಿಂದಲೇ ಮುಸ್ಲಿಂ ಹೋರಾಟ ಸರಕಾರಕ್ಕೆ ಧರ್ಮದ ಬೇಡಿಕೆಯಾಗಿ ಕಾಣುತ್ತಿದೆಯೇ ಹೊರತು ಶೋಷಣೆಯ ಧ್ವನಿಯಾಗಿ ಕೇಳುತ್ತಿಲ್ಲ.
ಯಾಕೆಂದರೆ ಇಂದು ಧರ್ಮ‌ಪ್ರೇರಿತ ಹಿಂಸೆಗಳು ಜಾಗತಿಕವಾಗಿ ಇಸ್ಲಾಮನ್ನು ಕೆಂಗಡಿಸುತ್ತಿದ್ದು ಜಗತ್ತಿನ ಸರ್ವರಲ್ಲೂ ಆತಂಕವನ್ನು ಸೃಷ್ಟಿಸುತ್ತಿದೆ. ಆದ್ದರಿಂದ ಇನ್ನಾದರೂ ಮುಸ್ಲಿಂ ಮನಸ್ಥಿತಿ ಬದಲಾಗಬೇಕಿದೆ. ಶೋಷಣೆಯ ವಿರೋಧದ ಸದ್ದು ವ್ಯವಸ್ಥೆಗೆ ತಟ್ಟಬೇಕೇ ಹೊರತು ದೇಶದ ಸಾಮರಸ್ಯತೆಗಲ್ಲ.


     -
ಟಿ.ಎಂ ಅನ್ಸಾರ್ ತಂಬಿನಮಕ್ಕಿ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ